Wednesday, September 25, 2024
spot_img

ಜನಸೇವೆಯೇ ಆಪ್ ಪಕ್ಷದ ಗುರಿ: ಟಿ. ನೇತ್ರಾವತಿ

ಶಿವಮೊಗ್ಗ: ಜನರ ಪ್ರೀತಿಗೆ ಹೃದಯ ಮಿಡಿದಿದೆ. ಸೇವೆ ಮಾಡುವ ತುಡಿತ ಮತ್ತಷ್ಟು ಇಮ್ಮಡಿಯಾಗಿದೆ ಎಂದು ಆಮ್ ಆದ್ಮಿ ಪಕ್ಷದ ಶಿವಮೊಗ್ಗ ನಗರ ಕ್ಷೇತ್ರದ ಅಭ್ಯರ್ಥಿ ನೇತ್ರಾವತಿ ಗೌಡ ಹೇಳಿದರು.
ಅವರು ಇಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ ಮೀಡಿಯಾ ಹೌಸ್‍ನಲ್ಲಿ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ, ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದೆ. ಟಿಕೆಟ್ ಆಕಾಂಕ್ಷಿ ಆಗಿರಲಿಲ್ಲ. ನನ್ನ ಸೇವೆಯನ್ನು ಗುರುತಿಸಿ ಪಕ್ಷ ಟಿಕೆಟ್ ನೀಡಿದೆ. ಅದನ್ನು ಸಮರ್ಥವಾಗಿ ಬಳಸಿಕೊಳ್ಳುವೆ. ಜನರ ಸೇವೆಯೇ ನನ್ನ ಮುಖ್ಯ ಗುರಿ ಎಂದರು.
ಸಾಮಾಜಿಕ ಕೆಲಸ ಮಾಡುತ್ತಾ ಬಂದಿರುವ ನಾನು ನಗರದ ಎಲ್ಲಾ ವಾರ್ಡುಗಳಲ್ಲಿ ಓಡಾಡಿದ್ದೇನೆ ರಾಶಿ ರಾಶಿ ಸಮಸ್ಯೆಗಳನ್ನು ಕಂಡಿದ್ದೇನೆ. ಮೂಲಭೂತ ಸೌಲಭ್ಯಗಳೇ ಇಲ್ಲವಾಗಿದೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ಸರ್ಕಾರಿ ಆಸ್ಪತ್ರೆಗಳಲ್ಲಿ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ. ಶಿಕ್ಷಣಕ್ಕೆ ಆದ್ಯತೆ ಇಲ್ಲ. ಇಂಜಿನಿಯರ್ ಪದವಿ ಪಡೆದವರು ಕೂಡ ಕೆಲಸವಿಲ್ಲದೆ ಮನೆಯಲ್ಲಿ ಕುಳಿತಿದ್ದಾರೆ. ಬಡವರ ಬದುಕು ಮತ್ತಷ್ಟು ದುಸ್ತರವಾಗಿದೆ. ಭ್ರಷ್ಟಾಚಾರ ತಾಂಡವಾಡುತ್ತಿದೆ. ಜನರ ಆಕ್ರೋಶ ಹೆಚ್ಚಾಗುತ್ತಿರುವುದು ಕಂಡುಬರುತ್ತಿದೆ. ಜನರು ಬದಲಾವಣೆ ಬಯಸಿದ್ದಾರೆ. ನಮಗೊಂದು ಅವಕಾಶ ಕೊಡಿ ಎಂದು ಮತದಾರರಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದರು.
ಚುನಾವಣೆಯ ಪ್ರಚಾರ ಸಂದರ್ಭದಲ್ಲಿ ಜನರ ಪ್ರೀತಿ ಕಂಡು ಮೂಕ ವಿಸ್ಮಿತಳಾಗಿದ್ದೇನೆ. ಬೊಮ್ಮನಕಟ್ಟೆಯಂತಹ ಊರಿನಲ್ಲಿ ಕೂಲಿ ಮಾಡುವ ಮಹಿಳೆಯರು ನನ್ನನ್ನು ಕರೆಸಿ ಆಶೀರ್ವದಿಸಿ ಒಂದಿಷ್ಟು ಪ್ರಚಾರಕ್ಕೆ ಇಟ್ಟುಕೊಳ್ಳಿ ಎಂದು ಹಣ ಕೊಟ್ಟಿದ್ದನ್ನು ನಾನು ಮರೆಯಲಾರೆ. ರಾಜಕಾರಣ ಇಂತಹ ಪ್ರೀತಿಯನ್ನು ಕೊಡುತ್ತದೆ ಎಂಬುದೇ ನನಗೆ ಅತ್ಯಂತ ಭರವಸೆ ಮೂಡಿಸಿದೆ ಎಂದರು.
ಉದ್ಯೋಗ ಅವಕಾಶಗಳು ಹೆಚ್ಚಬೇಕು. ಭ್ರಷ್ಟಾಚಾರ ಕೊನೆಯಾಗಬೇಕು. ಮಹಿಳೆಯರು ಸ್ವಾವಲಂಬಿಯಾಗಬೇಕು. ಉಚಿತ ಆರೋಗ್ಯ ಎಲ್ಲರಿಗೂ ಸಿಗಬೇಕು. ಶಿಕ್ಷಣ ಪ್ರತಿಯೊಬ್ಬರ ಹಕ್ಕಾಗಬೇಕು ಎಂಬುದು ನಮ್ಮ ಪಕ್ಷದ ಮಂತ್ರವಾಗಿದೆ. ಜೊತೆಗೆ ಪ್ರವಾಸೋದ್ಯಮ, ಕ್ರೀಡೆ, ಮೂಲಭೂತ ಸೌಕರ್ಯಕಗಳು ಹೀಗೆ ಎಲ್ಲಾ ಕ್ಷೇತ್ರಗಳಲ್ಲು ಅಭಿವೃದ್ಧಿಯಾಗಬೇಕೆಂಬುದೇ ನಮ್ಮ ಕನಸು ಎಂದರು.
ಪ್ರಚಾರಕ್ಕೆ ಹೋದಾಗ ಸ್ಥಳೀಯರು ತಮ್ಮ ಸಂಕಟಗಳನ್ನು ಹೇಳಿಕೊಂಡಿದ್ದಾರೆ. ನಮ್ಮ ವಾರ್ಡಿಗೆ ರಾಜಕಾರಣಿಗಳೇ ಬರಬೇಡಿ ಎಂದು ಮುಖಕ್ಕೆ ಹೊಡೆದಂತೆ ಮಾತನಾಡಿದ್ದಾರೆ. ಆನರ ಆಕ್ರೋಶ ನನಗೆ ಗೊತ್ತಾಗಿದೆ. ಹಾಗಾಗಿ ಹಣ, ಹೆಂಡ ಹಂಚದೆ ಸೇವೆಯನ್ನು ನೀಡುತ್ತೇವೆ ಎಂಬ ಕಾರಣ ಮುಂದಿಟ್ಟುಕೊಂಡೇ ಮತದಾರರ ಬಳಿ ಹೋಗುತ್ತಿದ್ದೇವೆ ಎಂದರು.
ಶಿವಮೊಗ್ಗದ ಎಲ್ಲಾ ವಾರ್ಡುಗಳಲ್ಲಿಯೂ ಸಮಿತಿ ರಚಿಸಿದ್ದೇವೆ. ಚುನಾವಣೆ ಹೇಗೆ ನಡೆಸಬೇಕೆಂಬುದನ್ನು ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಿದ್ದರಿಂದ ಅನುಭವವಾಗಿದೆ. ಪಕ್ಷದ ಕಾರ್ಯಕರ್ತರು ನನ್ನೊಂದಿಗಿದ್ದಾರೆ. ನನ್ನ ಪ್ರಚಾರಕ್ಕೆ ಕೇಂದ್ರ, ರಾಜ್ಯ, ಜಿಲ್ಲೆಯ ಮುಖಂಡರು ಆಗಮಿಸಲಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರಿಗೂ ಪ್ರಚಾರಕ್ಕೆ ಬರಲು ಮನವಿ ಮಾಡಿದ್ದೇನೆ ಎಂದರು.

Related Articles

Stay Connected

0FansLike
3,912FollowersFollow
0SubscribersSubscribe

Latest Articles