Wednesday, September 25, 2024
spot_img

ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ನಾರಾಯಣಸ್ವಾಮಿ ನಿರ್ಧಾರ

ಶಿವಮೊಗ್ಗ: ಯಾವುದೇ ಕಾರಣಕ್ಕೂ ಚುನಾವಣಾ ಕಣದಿಂದ ಹಿಂದೆ ಸರಿಯುವುದಿಲ್ಲ. ಅಭಿಮಾನಿಗಳ, ಬೆಂಬಲಿಗರ ಅಭಿಪ್ರಾಯ ಪಡೆದು ಗುರುವಾರ ನಾಮಪತ್ರ ಸಲ್ಲಿಸುವುದಾಗಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ವಿ. ನಾರಾಯಣಸ್ವಾಮಿ ಹೇಳಿದ್ದಾರೆ.
ಅವರು ಇಂದು ಗೋಲ್ಡನ್ ಸಿಟಿಯ ತಮ್ಮ ನಿವಾಸದೆದುರು ಅಭಿಮಾನಿಗಳ ಹಾಗೂ ಕಾರ್ಯಕರ್ತರ ಸಭೆ ನಡೆಸಿ, ಆ ಬಳಿಕ ಮಾತನಾಡಿದರು.
ಕಳೆದ 19 ವರ್ಷಗಳಿಂದ ಗ್ರಾಮಾಂತರ ಕ್ಷೇತ್ರದಲ್ಲಿ ನೆಲ ಕಚ್ಚಿತ್ತು. ಹಲವು ವರ್ಷಗಳಿಂದ ನಾನು ಸಹ ಪಕ್ಷದಲ್ಲಿ ತೊಡಗಿಕೊಂಡು ಕ್ಷೇತ್ರದ ಪ್ರತಿ ಗ್ರಾಮಕ್ಕೂ ಭೇಟಿ ನೀಡಿದ್ದೇನೆ. ಕಾರ್ಯಕರ್ತರ ಪಡೆಯನ್ನು ಕಟ್ಟಿದ್ದೇನೆ. ನಾನು ಪಕ್ಷದಿಂದ ಸ್ಪರ್ಧಿಸಿದಲ್ಲಿ ಗೆಲುವು ನಿಶ್ಚಿತ ಎಂಬ ವಾತಾವರಣ ನಿರ್ಮಾಣವಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಪಕ್ಷದ ಮುಖಂಡರು ನನಗೆ ಟಿಕೆಟ್ ಕೊಡದೇ ಇರುವುದು ತೀವ್ರ ಅಸಮಾಧಾನ ಉಂಟಾಗಿದೆ. ನನಗಿಂತ ನನ್ನ ಅಭಿಮಾನಿಗಳಲ್ಲಿ ತೀವ್ರ ನಿರಾಸೆ ಮೂಡಿದೆ ಎಂದರು.
ಡಾ. ಶ್ರೀನಿವಾಸ್ ಕರಿಯಣ್ಣ ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿ 33 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಹೀನಾಯವಾಗಿ ಸೋಲು ಕಂಡಿದ್ದರು. ನಂತರದ ದಿನಗಳಲ್ಲಿ ಕಾರ್ಯಕರ್ತರಿಂದ ದೂರವೇ ಉಳಿದಿದ್ದರು. ಅಂತಹ ಅಭ್ಯರ್ಥಿಗೆ ಪಕ್ಷದ ವರಿಷ್ಟರು ಮಣೆ ಹಾಕಿರುವುದು ಸರಿಯಲ್ಲ.

ಪಕ್ಷದ ವರಿಷ್ಟರ ಇಂತಹ ಅಚಾತುರ್ಯದ ನಿರ್ಧಾರಗಳಿಂದಲೇ ದೇಶದಲ್ಲಿ ಪಕ್ಷಕ್ಕೆ ದುಸ್ಥಿತಿ ಬಂದೊದಗಿದೆ. ಬಿಜೆಪಿ ಸರ್ಕಾರ ಸಮರ್ಥವಾದಂತಹ ಖಡಕ್ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಗೆಲುವಿನ ಮಾನದಂಡ ಇರುವವರಿಗೆ ಟಿಕೆಟ್ ಘೋಷಣೆ ಮಾಡುತ್ತಿದೆ. ಅವರ ರಾಜಕೀಯ ನಿರ್ಧಾರವನ್ನು ನಾವು ಮೆಚ್ಚುತ್ತೇವೆ. ಆದರೆ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಅಂತಹ ಖಡಕ್ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿಲ್ಲ. ಇದು ಎಲ್ಲೋ ಒಂದು ರೀತಿ ಪಕ್ಷಕ್ಕೆ ಶವಪೆಟ್ಟಿಗೆಗೆ ಕೊನೆ ಮೊಳೆ ಹೊಡೆದಂತಾಗುತ್ತಿದೆ ಎಂದರು.
ಇನ್ನೂ ಕಾಲ ಮಿಂಚಿಲ್ಲ. ಪಕ್ಷದ ನಾಯಕರು ನನ್ನನ್ನು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಬೇಕು. ಪಕ್ಷ ಯಾವುದೇ ತೀರ್ಮಾನ ತೆಗೆದುಕೊಂಡರೂ ನಾನು ಸ್ಪರ್ಧಿಸಬೇಕೆನ್ನುವುದು ಅಭಿಮಾನಿಗಳ ಒತ್ತಾಯವಾಗಿದೆ. ನಾನು ಸ್ವಾಭಿಮಾನಿ ಪಕ್ಷ. ಅಭಿಮಾನಿಗಳು ಹೇಳಿದಂತೆ ಕೇಳುತ್ತೇನೆ. ಗುರುವಾರ ನಾಮಪತ್ರ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಜಮಾಯಿಸಿದ್ದ ನೂರಾರು ಅಭಿಮಾನಿಗಳು ವಿ. ನಾರಾಯಣಸ್ವಾಮಿ ಅವರಿಗೆ ಜಯಕಾರ ಹಾಕುತ್ತಿದ್ದರು.
ಈ ಸಂದರ್ಭದಲ್ಲಿ ನಾಗೇಶ್, ಬಿ.ಎಂ. ಸತ್ಯನಾರಾಯಣ, ಶಂಕರಪ್ಪ, ಮನ್ಸೂರು, ಸುಧೀರ್, ಮುರುಗೇಂದ್ರ, ಮಲ್ಲೆಶ್, ತಮ್ಮಡಿಹಳ್ಳಿ ಪರಮೇಶ್, ವಿಶ್ವನಾಥ, ರಾಮಿನಕೊಪ್ಪ ಚಂದ್ರಪ್ಪ, ಯುವಕರು ಬೆಂಬಲ ನೀಡಿದ್ದಾರೆ.

Related Articles

Stay Connected

0FansLike
3,912FollowersFollow
0SubscribersSubscribe

Latest Articles