ಮಂಡ್ಯ: ಬಿರುಬಿಸಿಲಿನಿಂದ ಕಂಗೆಟ್ಟಿದ್ದ ಸಕ್ಕರೆ ನಾಡು ಮಂಡ್ಯಕ್ಕೆ ಸಂಜೆ ಬಳಿಕ ವರುಣನ ಆಗಮನವಾಗಿದ್ದು, ಅರ್ಧ ಗಂಟೆಗಳ ಕಾಲ ಸುರಿದ ಭರ್ಜರಿ ಮಳೆಗೆ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಹಾಕಿದ್ದ ಮಂಡ್ಯಕ್ಕೆ ಸ್ವಾಗತ ಎಂಬ ಕಮಾನು ಕುಸಿದು ಬಿದ್ದಿದೆ
ಗುರುವಾರ ಮಂಡ್ಯ ನಗರದಲ್ಲಿ ಬೆಳಿಗ್ಗೆಯಿಂದ ಚುನಾವಣೆ ಪ್ರಚಾರ ಸಭೆಗಳ ಅಬ್ಬರವಿತ್ತು. ನಟ ದರ್ಶನ ಕೂಡ ಆಗಮಿಸಿದ್ದ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಜ ಸೇರಿದ್ದರು. ಸಂಜೆ 4 ಗಂಟೆಯಾಗುತ್ತಿದ್ದಂತೆ ಮೋಡ ಮುಸುಕಿದ ವಾತಾವರಣ ಕಂಡು ಬಂದಿತು. ಆ ಬಳಿಕ ಅರ್ಧ ಗಂಟೆ ಜೋರು ಬಿರುಗಾಳಿ ಸಹಿತ ಮಳೆ ಸುರಿಯಿತು.
ಈ ವೇಳೆ ಮಂಡ್ಯ ನಗರದ ಹೊರವಲಯದ (ಮೈಸೂರು ಮಾರ್ಗ) ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಮಂಡ್ಯ ನಗರದ ಸ್ವಾಗತ ಕಮಾನು ಸುರಿದ ಮಳೆ ಸಂದರ್ಭದಲ್ಲಿ ಬಿರುಗಾಳಿಗೆ ಕುಸಿದು ಬಿದ್ದಿದೆ. ಜೆಸಿಬಿ ಯಂತ್ರ ಬಳಸಿ ಕೆಳಗೆ ಬಿದ್ದಿದ್ದ ಸ್ವಾಗತ ಕಮಾನನ್ನು ತೆರವುಗೊಳಿಸಲಾಗಿದೆ. ಘಟನೆಯಿಂದ ಕೆಲ ಕಾಲ ವಾಹನ ಸಂಚಾರಕ್ಕೆ ಸಮಸ್ಯೆಯಾಯಿತು.
ವಿದ್ಯುತ್ ಕಂಬಗಳು ಧರೆಗೆ
ಮಂಡ್ಯ ತಾಲೂಕು ರಾಗಿಮುದ್ದನಹಳ್ಳಿ ಗೇಟ್ ಬಳಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕಬ್ಬಿಣದ ಬೃಹತ್ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಇದರಿಂದ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತವಾಗಿದೆ. ವಾಹನಗಳು ಮುಂದೆ ಸಂಚರಿಸಲಾಗದೆ ಹೆದ್ದಾರಿಯಲ್ಲಿ ಸಾಲುಗಟ್ಟಿ ನಿಂತಿವೆ.
ಶ್ರೀರಂಗಪಟ್ಟಣದಲ್ಲಿಕೇವಲ 15 ನಿಮಿಷವಷ್ಟೇ ಮಳೆಯಾಗಿದೆ. ಮಳವಳ್ಳಿ, ಪಾಂಡವಪುರ ತಾಲೂಕಿನಲ್ಲಿಸಣ್ಣ ಮಳೆಯಾಗಿದೆ. ಆದರೆ, ಮಂಡ್ಯ ಮತ್ತು ಶ್ರೀರಂಗಪಟ್ಟಣ ವ್ಯಾಪ್ತಿಯಲ್ಲಿ ಮಳೆಯೊಂದಿಗೆ ಬಿರುಗಾಳಿಯೂ ಜೋರಾಗಿತ್ತು. ಹೀಗಾಗಿ ಹಲವೆಡೆ ವಿದ್ಯುತ್ ಕಂಬಗಳು, ವಿದ್ಯುತ್ ಟವರ್ಗಳು, ಮರಗಳು ಮುರಿದು ಬಿದ್ದಿವೆ