Assault Case: ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಅಂಚೇಪಾಳ್ಯದಲ್ಲಿ ಹಲ್ಲೆ ನಡೆದಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್ ಮಂಜುನಾಥ್ ಪರ ಪ್ರಚಾರ ಮಾಡಿದ್ದಕ್ಕೆ ಜೆಡಿಎಸ್ ಗ್ರಾಪಂ ಸದಸ್ಯನ ಮೇಲೆ ಕಾಂಗ್ರೆಸ್ ಬೆಂಬಲಿಗರು ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.
ತುಮಕೂರು: ಬಿಜೆಪಿ ಅಭ್ಯರ್ಥಿ ಪರ ಮತಯಾಚನೆ ಮಾಡಿದ್ದಕ್ಕೆ ಜೆಡಿಎಸ್ ಗ್ರಾಪಂ ಸದಸ್ಯನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಕುಣಿಗಲ್ ತಾಲೂಕಿನ ಅಂಚೇಪಾಳ್ಯದಲ್ಲಿ ನಡೆದಿದೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ಸಿ.ಎನ್ ಮಂಜುನಾಥ್ ಪರ ಪ್ರಚಾರ ಮಾಡಿದ್ದಕ್ಕೆ ಕಾಂಗ್ರೆಸ್ ಮುಖಂಡ ಹಾಗೂ ಬೆಂಬಲಿಗರು ಹಲ್ಲೆ (Assault Case) ಮಾಡಿರುವ ಆರೋಪ ಕೇಳಿಬಂದಿದೆ.
ಕೆಂಪನಹಳ್ಳಿ ಗ್ರಾಪಂ ಜೆಡಿಎಸ್ ಸದಸ್ಯ ಮಂಜುನಾಥ್ ಮೇಲೆ ಹಲ್ಲೆಗೊಳಗಾದವರು. ಕೆಂಪನಹಳ್ಳಿ ಕಾಂಗ್ರೆಸ್ ಮುಖಂಡ ಬೊರೇಗೌಡ ಹಾಗೂ ಬೆಂಬಲಿಗರ ವಿರುದ್ಧ ಹಲ್ಲೆ ಆರೋಪ ಹಲ್ಲೆ ಆರೋಪ ಕೇಳಿಬಂದಿದೆ. ಬುಧವಾರ ಸಂಜೆ ಮಾತನಾಡಬೇಕೆಂದು ಮಂಜುನಾಥ್ ಅವರನ್ನು ಬೋರೇಗೌಡ ಕರೆಸಿಕೊಂಡಿದ್ದ. ಅಂಚೇಪಾಳ್ಯದ ಬಳಿ ಬರುತ್ತಿದ್ದಂತೆ ಏಕಾಏಕಿ ಚಾಕುವಿಂದ ಬೋರೇಗೌಡ ತಿವಿದು ಹಲ್ಲೆ ನಡೆಸಿದ್ದಾನೆ. ಹೀಗಾಗಿ ಪ್ರಾಣ ಉಳಿಸಿಕೊಳ್ಳಲು ಮಂಜುನಾಥ್ ಕೆಳಗೆ ಬಗ್ಗಿದ್ದಾರೆ. ಈ ವೇಳೆ ಮಂಜುನಾಥ್ ತಲೆಗೆ ಚಾಕು ಚುಚ್ಚಿದ್ದು, ಗಂಭೀರ ಗಾಯವಾಗಿದೆ. ಅವರನ್ನು ಕುಣಿಗಲ್ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಗೆ ಮಂಜುನಾಥ್ ದೂರು ನೀಡಿದ್ದಾರೆ.